Thursday 19 August 2021

ಗಂಡು ಮಗುವಿಗೆ ಜನ್ಮ ನೀಡಿಲ್ಲವೆಂದು ಪತ್ನಿ ಮೇಲೆ ಕುದಿಯುವ ನೀರೆರೆಚಿದ ನಿರ್ದಯ ಪತಿ!

ಶಹಜಹಾನ್ ಪುರ: ಉತ್ತರ ಪ್ರದೇಶದ ಶಹಜಹಾನ್ ಪುರದಿಂದ ಅತ್ಯಂತ ಭಯಾನಕ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿ ಒಬ್ಬ ವ್ಯಕ್ತಿಯು ತನ್ನ ಪತ್ನಿಯು ಗಂಡು ಮಗುವಿಗೆ ಜನ್ಮ ನೀಡಿಲ್ಲವೆಂದು ಆಕೆಯ ಮೇಲೆ ನಿರ್ದಯವಾಗಿ ಕುದಿಯುವ ನೀರೆರೆಚಿ ಪರಾರಿಯಾಗಿದ್ದಾನೆ. ಘಟನೆಯ ನಂತರ ಪ್ರದೇಶದಲ್ಲಿ ಭೀತಿಯ ವಾತಾವರಣ ಮನೆ ಮಾಡಿದೆ. 

ಘಟನೆಯ ನಂತರ, ಸಂತ್ರಸ್ತೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿ ಆಕೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಕುದಿಯುವ ನೀರು ಆಕೆಯ ದೇಹದ ಮೇಲೆ ಬಿದ್ದಿದ್ದರಿಂದ ಮಹಿಳೆ ತೀವ್ರವಾಗಿ ಗಾಯಗೊಂಡಿದ್ದಾಳೆ. ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. 

ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ ಪೊಲೀಸರು :
ಪತ್ನಿಗೆ ಕುದಿಯುವ ನೀರೆರೆಚಿ ಪರಾರಿಯಾಗಿರುವ  ಆರೋಪಿಯ ಹೆಸರು ಸತ್ಯಪಾಲ್ ಎಂದು ತಿಳಿದುಬಂದಿದೆ. ಸಂತ್ರಸ್ತೆಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಆಕೆ ತನ್ನ ಕಿರಿಯ ಮಗುವಿಗೆ ಒಂದು ವರ್ಷದ ಹಿಂದೆ ಜನ್ಮ ನೀಡಿದ್ದಾಳೆ ಎಂದು ಪ್ರಾಥಮಿಕ ತನಿಕೆಯಿಂದ ತಿಳಿದುಬಂದಿದೆ. ಆರೋಪಿ ವಿರುದ್ಧ ಸಂಬಂದಿತ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ಆರೋಪಿಯನ್ನು ಹುಡುಕಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ಶಹಜಹಾನ್ ಪುರ ಗ್ರಾಮಾಂತರ ಎಸ್ಪಿ ಸಂಜೀವ್ ಬಾಜಪೈ, ಸಂತ್ರಸ್ತೆಯು ಆರೋಪಿ ಸತ್ಯಪಾಲ್ ಅವರೊಂದಿಗೆ 2013 ರಲ್ಲಿ ವಿವಾಹವಾಗಿದ್ದಾರೆ. ಆರೋಪಿ ಸತ್ಯಪಾಲ್ ತನ್ನ ಮಡದಿಗೆ ತವರು ಮನೆಯಿಂದ 50,000 ರೂ.ಗಳನ್ನು ತರುವಂತೆ ಪೀಡಿಸುತ್ತಿದ್ದನು. ವರದಕ್ಷಿಣೆ ತರುವಂತೆ ತನ್ನ ಪತ್ನಿಗೆ ಸಾಕಷ್ಟು ಕಿರುಕುಳ ನೀಡುತ್ತಿದ್ದನು. ಇದಲ್ಲದೆ ಆಕೆ ಗಂಡು ಮಗುವಿಗೆ ಜನ್ಮ ನೀಡಿಲ್ಲ ಎಂಬ ಕಾರಣಕ್ಕೆ ಆಕೆಯನ್ನು ಹಿಂಸಿಸುತ್ತಿದ್ದನು. ಆಕೆಗೆ ಆಹಾರವನ್ನು ಸಹ ನೀಡುತ್ತಿರಲಿಲ್ಲ ಎಂದು ತನಿಖೆಯಲ್ಲಿ ತಿಳಿದುಬಂದಿದೆ ಎಂದಿದ್ದಾರೆ.

ಸಂತ್ರಸ್ತೆಯ ತಂದೆ ಪೊಲೀಸ್ ಠಾಣೆಯಲ್ಲಿ ಆರೋಪಿ ಅಳಿಯನ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಅವರು ಹೇಳಿದರು. ಘಟನೆ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದಾನೆ. ಆತನಿಗಾಗಿ ಹುಡುಕಾಟ ನಡೆಯುತ್ತಿದೆ. ಶೀಘ್ರದಲ್ಲೇ ಆತ ಪೊಲೀಸರ ವಶದಲ್ಲಿರುತ್ತಾನೆ. ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಭರವಸೆ ನೀಡಿದ್ದಾರೆ.

No comments:

Post a Comment