Monday, 31 October 2022

Rohit Sharma: ಪಂದ್ಯ ಮುಗಿದ ಬಳಿಕ ತಂಡದ ಸೋಲಿಗೆ ನಾಯಕ ರೋಹಿತ್ ಶರ್ಮಾ ದೂರಿದ್ದು ಯಾರನ್ನು ಗೊತ್ತೇ?

Rohit Sharma Post Match IND vs SA

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ (T20 World Cup 2022) ಭಾನುವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತ (India vs South Africa) ಸೋಲು ಕಂಡಿದೆ. ಕಳಪೆ ಬ್ಯಾಟಿಂಗ್ ಮತ್ತು ಫೀಲ್ಡಿಂಗ್​ಗೆ ಬೆಲೆ ತೆತ್ತ ಟೀಮ್ ಇಂಡಿಯಾ ಚುಟುಕು ವಿಶ್ವಕಪ್​ 2022 ರಲ್ಲಿ ಮೊದಲ ಸೋಲುಂಡಿತು. 5 ವಿಕೆಟ್​ಗಳ ಭರ್ಜರಿ ಜಯದೊಂದಿಗೆ ಹರಿಣಗಳ ಪಡೆ ಪಾಯಿಂಟ್ ಟೇಬಲ್​ನಲ್ಲಿ ಅಗ್ರಸ್ಥಾನಕ್ಕೇರಿದೆ. ಭಾರತ ತಂಡ 4 ಅಂಕದೊಂದಿಗೆ ದ್ವಿತೀಯ ಸ್ಥಾನಕ್ಕೆ ಕುಸಿದಿದೆ. ಸೆಮಿ ಫೈನಲ್​ಗೇರಲು ಮುಂದಿನ ಎರಡು ಪಂದ್ಯ ಟೀಮ್ ಇಂಡಿಯಾಕ್ಕೆ ಬಹುಮುಖ್ಯವಾಗಿದೆ. ಭಾರತದ ಬೌಲರ್​ಗಳು ಆರಂಭದಲ್ಲಿ ಚೆನ್ನಾಗಿಯೇ ಎದುರಾಳಿಯನ್ನು ಕಟ್ಟಿ ಹಾಕಿದರಾದರೂ ಅಂತಿಮ ಹಂತದಲ್ಲಿ ಮಾಡಿದ ಕೆಲ ಎಡವಟ್ಟು ಹಾಗೂ ಫೀಲ್ಡಿಂಗ್​ನಲ್ಲಿ ನೀಡಿದ ಕೆಟ್ಟ ಪ್ರದರ್ಶನ ತಂಡದ ಸೋಲಿಗೆ ಕಾರಣವಾಯಿತು. ಪಂದ್ಯ ಮುಗಿದ ಬಳಿಕ ಮಾತನಾಡಿದ ನಾಯಕ ರೋಹಿತ್ ಶರ್ಮಾ (Rohit Sharma) ಏನು ಹೇಳಿದ್ದಾರೆ ಕೇಳಿ.

”ಪರ್ತ್ ಪಿಚ್​ನಲ್ಲಿ ಏನೋ ಇದೆ ಎಂಬುದನ್ನು ನಾವು ಭಾವಿಸಿದ್ದೆವು. ಇಲ್ಲಿ ವೇಗಿಗಳು ಹೆಚ್ಚು ಯಶಸ್ಸು ಸಾಧಿಸುತ್ತಾರೆ, ಹೀಗಾಗಿ ಟಾರ್ಗೆಟ್ ಬೆನ್ನಟ್ಟುವುದು ಈ ಪಿಚ್​ನಲ್ಲಿ ಸುಲಭವಲ್ಲ. ನಾವು ಬ್ಯಾಟಿಂಗ್​ನಲ್ಲಿ ಒಂದಿಷ್ಟು ರನ್​ಗಳನ್ನು ಕಡಿಮೆ ಹೊಡೆದೆವು. ಫೈಟ್ ನೀಡಿದೆವು ಆದರೂ ದಕ್ಷಿಣ ಆಫ್ರಿಕಾ ಉತ್ತಮ ಬ್ಯಾಟಿಂಗ್ ನಡೆಸಿತು. 10 ಓವರ್ ಆದಾಗ 3 ವಿಕೆಟ್ ನಷ್ಟಕ್ಕೆ 40 ರನ್ ಗಳಿಸಿದ್ದಾಗ ನಾವಿನ್ನೂ ಪಂದ್ಯದಲ್ಲಿ ಇದ್ದೇವೆ ಎಂದು ಅಂದುಕೊಳ್ಳಬೇಕು. ಡೇವಿಡ್ ಮಿಲ್ಲರ್ ಮತ್ತು ಆ್ಯಡಂ ಮಾರ್ಕ್ರಮ್ ಅವರದ್ದು ಮ್ಯಾಚ್ ವಿನ್ನಿಂಗ್ ಪ್ರದರ್ಶನವಾಗಿತ್ತು,” ಎಂದು ಹೇಳಿದ್ದಾರೆ.

ಇದೇವೇಳೆ ತಂಡದ ಸೋಲಿಗೆ ಕಾರಣ ತಿಳಿಸಿದ ರೋಹಿತ್, ”ನಾವು ಫೀಲ್ಡಿಂಗ್​ನಲ್ಲಿ ಕಳಪೆ ಪ್ರದರ್ಶನ ನೀಡಿದೆವು. ಎದುರಾಳಿಗೆ ಸಾಕಷ್ಟು ಅವಕಾಶ ಬಿಟ್ಟುಕೊಟ್ಟೆವು. ಈ ವಿಭಾಗದಲ್ಲಿ ಉತ್ತಮ ಅಟವಾಡಿಲ್ಲ. ಕೊನೆಯ ಎರಡು ಪಂದ್ಯಗಳಲ್ಲಿ ನಮ್ಮ ಫೀಲ್ಡಿಂಗ್ ಅದ್ಭುತವಾಗಿತ್ತು. ಆದರೆ, ಅದನ್ನೇ ಇಲ್ಲೂ ಮುಂದುವರೆಸುವಲ್ಲಿ ಎಡವಿದೆವು. ಕೆಲ ಮುಖ್ಯ ರನೌಟ್​ಗಳನ್ನು ಮಿಸ್ ಮಾಡಿಕೊಂಡೆವು. ಈ ತಪ್ಪುಗಳಿಂದ ತಿದ್ದಿಕೊಂಡು ಸೋಲಿನಿಂದ ಪಾಠ ಕಲಿಯಬೇಕು,” ಎಂದು ತಿಳಿಸಿದ್ದಾರೆ.

ಇನ್ನು ಅಶ್ವಿನ್​ಗೆ 18ನೇ ಓವರ್ ಬೌಲಿಂಗ್ ಕೊಟ್ಟ ಬಗ್ಗೆ ಸ್ಪಷ್ಟನೆ ನೀಡಿರುವ ರೋಹಿತ್, ”ಕೊನೆಯ ಓವರ್​​ನಲ್ಲಿ ಸ್ಪಿನ್ನರ್​ಗೆ ಬೌಲಿಂಗ್ ನೀಡಿದರೆ ಏನು ಆಗುತ್ತದೆ ಎಂಬುದನ್ನು ನಾನು ನೋಡಿದ್ದೇನೆ. ಹೀಗಾಗಿ ನಾನು ಬೇರೆ ದಾರಿಯನ್ನು ಆಯ್ಕೆ ಮಾಡಿಕೊಂಡೆ. ಅಶ್ವಿನ್ ಅವರ ಓವರ್ ಮುಗಿಸಿ ಬಿಟ್ಟರೆ ವೇಗಿಗಳು ಸರಿಯಾದ ಓವರ್ ಬೌಲಿಂಗ್ ಮಾಡಲು ಸಾಧ್ಯವಾಗುತ್ತದೆ ಎಂಬುದು ತಲೆಯಲ್ಲಿತ್ತು. ಕೆಲ ಸಂದರ್ಭದಲ್ಲಿ ಈರೀತಿಯಾಗಿ ಯೋಜನೆ ಮಾಡಬೇಕಾಗುತ್ತದೆ. ಹೊಸ ಬ್ಯಾಟರ್ ಬಂದಾಗ ಬಾಲ್ ಮಾಡಲು ಅದೇ ಸರಿಯಾದ ಸಂದರ್ಭ. ಆದರೆ, ಡೇವಿಡ್ ಮಿಲ್ಲರ್ ಅತ್ಯುತ್ತಮ ಶಾಟ್ ಹೊಡೆದರು,” ಎಂಬುದು ರೋಹಿತ್ ಮಾತು.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 133 ರನ್ ಕಲೆಹಾಕಿತು. ಸೂರ್ಯಕುಮಾರ್ ಯಾದವ್ 40 ಎಸೆತಗಳಲ್ಲಿ 6 ಫೋರ್, 3 ಸಿಕ್ಸರ್ ಬಾರಿಸಿ 68 ರನ್ ಗಳಿಸಿದರೆ, ನಾಯಕ ರೋಹಿತ್ ಶರ್ಮಾ 15 ರನ್ ಬಾರಿಸಿದ್ದೇ ಹೆಚ್ಚು. ಉಳಿದ ಬ್ಯಾಟರ್​ಗಳು ಸಂಪೂರ್ಣ ವೈಫಲ್ಯ ಅನುಭವಿಸಿದರು. ಆಫ್ರಿಕಾ ಪರ ಲುಂಗಿ ಎನ್​ಗಿಡಿ 4 ವಿಕೆಟ್ ಕಿತ್ತರು. ಟಾರ್ಗೆಟ್ ಬೆನ್ನಟ್ಟಿದ ಆಫ್ರಿಕಾ ಆರಂಭದಲ್ಲಿ ವಿಕೆಟ್ ಕಳೆದುಕೊಂಡರೂ ಆ್ಯಡಂ ಮರ್ಕ್ರಮ್ (52) ಹಾಗೂ ಡೇವಿಡ್ ಮಿಲ್ಲರ್ (ಅಜೇಯ 59) ಅವರ 73 ರನ್​ಗಳ ಜೊತೆಯಾಟದ ನೆರವಿನಿಂದ 19.4 ಓವರ್​ನಲ್ಲಿ ಗೆದ್ದು ಬೀಗಿತು. ಭಾರತ ಪರ ಅರ್ಶ್​​ದೀಪ್ 2 ವಿಕೆಟ್ ಪಡೆದರು.



source https://tv9kannada.com/sports/cricket-news/rohit-sharma-in-post-match-presentation-after-india-vs-south-africa-t20-world-cup-match-here-is-what-he-said-vb-au48-462971.html

No comments:

Post a Comment

Featured post

148 ವರ್ಷಗಳ ನಂತರ, 10 ಜೂನ್ 2021 ರ ಮೊದಲ ಸೂರ್ಯಗ್ರಹಣ!!,

ಸಮಗ್ರ ಸುದ್ದಿ ಸ್ಪೇಷಲ್ : ಅಪರೂಪದ ಖಗೋಳ ವಿದ್ಯಾಮಾನದ ಕುರಿತಾಗಿ ವಿಶೇಷ ಲೇಖನ, ನವೀನ್.ಪಿ.ಆಚಾರ್ , ಸಹ ಕಾರ್ಯದರ್ಶಿ , ಚಿತ್ರದುರ್ಗ ವಿಜ್ಞಾನ ಕೇಂದ್ರ.  ಗ್ರಹಣ ಎಂದಾಕ...