Monday, 31 October 2022

ಗುಜರಾತಿನಲ್ಲಿ ಭೀಕರ ದುರಂತ : ಸೇತುವೆ ಕುಸಿದು ಬಿದ್ದು 90 ಕ್ಕೂ ಹೆಚ್ಚು ಮಂದಿ ಸಾವು

 

ಸುದ್ದಿಒನ್ ವೆಬ್ ಡೆಸ್ಕ್

ಅಹಮದಾಬಾದ್‌ : ಗುಜರಾತ್‌ನ ಮೊರ್ಬಿ ಜಿಲ್ಲೆಯ ಮಚ್ಚು ಅಣೆಕಟ್ಟಿನ ಮೇಲೆ ನಿರ್ಮಿಸಲಾದ ತೂಗು ಸೇತುವೆ ಭಾನುವಾರ ಸಂಜೆ ಕುಸಿದ ಪರಿಣಾಮ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 90 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ನೂರಾರು ಜನರು ಗಾಯಗೊಂಡಿದ್ದಾರೆ.ಛಾತ್ ಪೂಜೆ ಮಾಡಲು ಸುಮಾರು 500 ಕ್ಕೂ ಹೆಚ್ಚು ಜನರು ಸೇತುವೆ ಮೇಲೆ ನೆರೆದಿದ್ದರು ಎಂದು ವರದಿಯಾಗಿದೆ.

ಬ್ರಿಟಿಷರ ಕಾಲದ ಈ ಸೇತುವೆ ನವೀಕರಣಗೊಂಡು ಕೇವಲ ಒಂದು ವಾರವಷ್ಟೇ ಆಗಿತ್ತು.  ನದಿಗೆ ಬಿದ್ದ 100 ಕ್ಕೂ ಹೆಚ್ಚು ಮಂದಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಪ್ರಕರಣದ ತನಿಖೆಗೆ ವಿಶೇಷ ತಂಡ ರಚಿಸಲಾಗಿದೆ.

 

ವರದಿಗಳ ಪ್ರಕಾರ, ಮಚ್ಚು ನದಿಯ ನೀರಿನಲ್ಲಿ ಸುಮಾರು 100 ಕ್ಕೂ ಹೆಚ್ಚು ನೀರಿನಲ್ಲಿಯೇ ಇದ್ದು, ಅವರೆಲ್ಲರೂ ಕತ್ತಲೆಯಲ್ಲಿ ದಡವನ್ನು ತಲುಪಲು ಪ್ರಯತ್ನಿಸುತ್ತಿದ್ದಾರೆ. ಸ್ಥಳೀಯರ ಪ್ರಕಾರ

ಸತ್ತವರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು ತಿಳಿದು ಬಂದಿದೆ. ರಕ್ಷಣಾ ತಂಡದವರು ಎಪ್ಪತ್ತು ಮಂದಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಕ್ಷಣಾ ಕಾರ್ಯವು ತಡರಾತ್ರಿಯಾದರೂ  ನಡೆಯುತ್ತಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಎನ್‌ಡಿಆರ್‌ಎಫ್‌ನ ಐದು ತಂಡಗಳು ಸ್ಥಳಕ್ಕೆ ತಲುಪಿವೆ. ಸೇನೆ, ನೌಕಾಪಡೆ ಮತ್ತು ವಾಯುಸೇನೆ ಕೂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿವೆ. ಸ್ಥಳದಲ್ಲಿ
ವೈದ್ಯಕೀಯ ತಂಡವೂ ಬೀಡುಬಿಟ್ಟಿದೆ. ಕತ್ತಲಿರುವ ಕಾರಣದಿಂದ  ಕಾರ್ಯಾಚರಣೆಗೆ ತೊಂದರೆಯಾಗುತ್ತಿದೆ ಎಂದು ಅಲ್ಲಿನ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಗುಜರಾತ್‌ನಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿ, “ಮೋರ್ಬಿಯಲ್ಲಿ ಸಂಭವಿಸಿದ ದುರಂತದಿಂದ ನಾನು ತುಂಬಾ ದುಃಖಿತನಾಗಿದ್ದೇನೆ. ಈ ಬಗ್ಗೆ ಗುಜರಾತ್ ಮುಖ್ಯಮಂತ್ರಿ  @Bhupendrapbjp ಮತ್ತು ಇತರ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳು ಭರದಿಂದ ಸಾಗುತ್ತಿವೆ. ಸಂತ್ರಸ್ತರಿಗೆ ಅಗತ್ಯ ನೆರವು ನೀಡಲಾಗುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.

ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿರುವ
ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ರಕ್ಷಣಾ ಕಾರ್ಯಾಚರಣೆಗಳು ಮತ್ತು ವೈದ್ಯಕೀಯ ಸೇವೆಗಳನ್ನು ಖುದ್ದಾಗಿ ಪರಿಶೀಲಿಸುತ್ತಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ 4 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ 50 ಸಾವಿರ ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಗಿಯುವವರೆಗೂ ಮುಖ್ಯಮಂತ್ರಿಗಳು ಮೋರ್ಬಿಯಲ್ಲಿಯೇ ಬಿಡಾರ ಹೂಡುವ ಸಾಧ್ಯತೆ ಇದೆ.

ರಾಷ್ಟ್ರಪತಿ ದ್ರೌಪದಿ ಮುರ್ಮು, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ರಾಹುಲ್ ಗಾಂಧಿ ಮತ್ತು ಇತರರು ಸೇರಿದಂತೆ ಹಲವಾರು ರಾಜಕೀಯ ದಿಗ್ಗಜರು ಭೀಕರ ಘಟನೆಗೆ ಸಂತಾಪ ಸೂಚಿಸಿದ್ದಾರೆ.

The post ಗುಜರಾತಿನಲ್ಲಿ ಭೀಕರ ದುರಂತ : ಸೇತುವೆ ಕುಸಿದು ಬಿದ್ದು 90 ಕ್ಕೂ ಹೆಚ್ಚು ಮಂದಿ ಸಾವು first appeared on Kannada News | suddione.



source https://suddione.com/gujarat-bridge-tragedy-over-90-people-were-killed-when-the-bridge-snapped/

No comments:

Post a Comment

Featured post

148 ವರ್ಷಗಳ ನಂತರ, 10 ಜೂನ್ 2021 ರ ಮೊದಲ ಸೂರ್ಯಗ್ರಹಣ!!,

ಸಮಗ್ರ ಸುದ್ದಿ ಸ್ಪೇಷಲ್ : ಅಪರೂಪದ ಖಗೋಳ ವಿದ್ಯಾಮಾನದ ಕುರಿತಾಗಿ ವಿಶೇಷ ಲೇಖನ, ನವೀನ್.ಪಿ.ಆಚಾರ್ , ಸಹ ಕಾರ್ಯದರ್ಶಿ , ಚಿತ್ರದುರ್ಗ ವಿಜ್ಞಾನ ಕೇಂದ್ರ.  ಗ್ರಹಣ ಎಂದಾಕ...