Monday 16 August 2021

ಶಾಲಾರಂಭಕ್ಕೆ ಇಂದು ಮಾರ್ಗಸೂಚಿ ಬಿಡುಗಡೆ: ಶಿಕ್ಷಣ ಸಚಿವ, ಬಿ.ಸಿ.ನಾಗೇಶ್.

 

ಬೆಂಗಳೂರು: 9 ರಿಂದ 12 ನೇ ತರಗತಿವರೆಗೆ ಪ್ರಾರಂಭ ಮಾಡುವ ಕುರಿತು ಇಂದು ಸಂಜೆ ಮಾರ್ಗಸೂಚಿ ಬಿಡುಗಡೆ ಮಾಡುತ್ತಿದ್ದೇವೆ. ಮುಖ್ಯಮಂತ್ರಿಗಳು ಕೂಡ ಶಾಲೆ ಪ್ರಾರಂಭ ಘೋಷಿಸಿದ್ದಾರೆ. ಆಗಸ್ಟ್ 23 ರಿಂದ ಶಾಲೆಗಳು ಪ್ರಾರಂಭವಾಗುತ್ತವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇಕಾದ ಎಲ್ಲಾ ಸಿದ್ದತೆ ಮಾಡಿಕೊಳುತ್ತಿದ್ದೇವೆ. ಎರಡು ಜಿಲ್ಲೆ ಹೊರತು ಪಡಿಸಿ ಉಳಿದ ಕಡೆ ಪ್ರಾರಂಭ ಮಾಡುತ್ತಿದ್ದೇವೆ. ಈಗಾಗಲೇ ಜಿಲ್ಲಾಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದೇನೆ. ಮಕ್ಕಳಿಗೆ ಪೂರಕವಾದ ಮಾರ್ಗಸೂಚಿ ಪ್ರಕಟವಾಗಲಿದೆ ಎಂದರು.

ಮಕ್ಕಳಿಗೆ ಮಾಸ್ಕ್ ಕಡ್ಡಾಯ ಮಾಡಲಾಗುತ್ತದೆ. ಮನೆಯಿಂದ ಬಂದು ಮನೆಗೆ ವಾಪಸಾಗುವವರೆಗೆ ಇರಬೇಕು. ಇದನ್ನು ಶಿಕ್ಷಕರು ನೋಡಿಕೊಳ್ಳುತ್ತಾರೆ. ಶಿಕ್ಷಕರಿಂದಲೂ ಶಾಲೆ ಪ್ರಾರಂಭಕ್ಕೆ ಬೆಂಬಲವಿದೆ ಎಂದು ಸಚಿವರು ಹೇಳಿದರು.

ಖಾಸಗಿ ಶಾಲೆಗಳಿಂದ ಶುಲ್ಕ ವಸೂಲಿ‌ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾವು ಯಾವುದನ್ನೂ ಬಲವಂತವಾಗಿ ಹೇರಲಾಗಲ್ಲ. ರೂಪ್ಸಾ ಜೊತೆ ನಾನು ಮಾತನಾಡಿದ್ದೇನೆ. ಕೋವಿಡ್ ನಿಂದ ಪೋಷಕರು ಸಂಕಷ್ಟದಲ್ಲಿದ್ದಾರೆ. ಹಾಗಾಗಿ ಹೆಚ್ಚು ಬಲವಂತ ಮಾಡಬೇಡಿ ಎಂದಿದ್ದೇವೆ. ಖಾಸಗಿ ಶಾಲೆಗಳ ಸಂಘಟನೆ ಒಪ್ಪಿದೆ. ಪೂರ್ಣ ಶುಲ್ಕ ಕಟ್ಟಿ ಎನ್ನುವುದು ಸರಿಯಲ್ಲ. ಪೋಷಕರನ್ನ ಕಸ್ಟಮರ್ ರೀತಿ ನೋಡಿಬೇಡಿ ಎಂದಿದ್ದೇನೆ. ಶಾಲೆಗಳನ್ನೂ ಇತಿಮಿತಿಗೆ ತೆಗೆದುಕೊಳ್ಳಬೇಕು. ಪೋಷಕರ ಹಿತವನ್ನೂ‌ಗಮನಿಸಬೇಕು. ಎಲ್ಲವನ್ನೂ‌ನೋಡಿಯೇ ನಿರ್ಧಾರ ತೆಗೆದುಕೊಳ್ಳುತ್ತೇವೆ. ಕೆಲವೊಂದು ವಿಚಾರ ಕೋರ್ಟ್ ನಲ್ಲಿವೆ, ಹಾಗಾಗಿ ನೇರವಾಗಿ ಹಿಡಿತ ಸಾದಿಸುವುದು ಕಷ್ಟ ಎಂದರು.

ಮೂರನೇ ಅಲೆ ಬರುತ್ತದೆ ಎನ್ನಲಾಗುತ್ತಿದೆ. ತಜ್ಙರ ಸಲಹೆಗೆ ಹೆಚ್ಚಿನ ಒತ್ತು ಕೊಟ್ಟಿದ್ದೇವೆ. ಆಗಸ್ಟ್ 30 ರಂದು ತಜ್ಙರ ಸಮಿತಿ ಸಭೆ ನಡೆಯುತ್ತದೆ. ತಜ್ಙರ ಜೊತೆ ಸಿಎಂ ಸಭೆ ನಡೆಸುತ್ತಾರೆ. ಅಲ್ಲಿ 1 ರಿಂದ 8 ರವರೆಗೆ ತೆರೆಯುವ ಬಗ್ಗೆ ಚರ್ಚೆ ಮಾಡಿ ಮುಖ್ಯಮಂತ್ರಿಗಳು ನಿರ್ಧರಿಸುತ್ತಾರೆ ಎಂದರು.

ತಹಸೀಲ್ದಾರ್, ಬಿಇಒ‌ ಜೊತೆ ಕೇಳಿಕೊಂಡಿದ್ದೇವೆ. ಶಿಕ್ಷಕರ ಜೊತೆ ಕೈಜೋಡಿಸುವಂತೆ ಸೂಚಿಸಿದ್ದೇವೆ. ಶಾಲೆಗಳ ಕೊಠಡಿ ಸ್ಯಾನಿಟೈಸ್ ಮಾಡುವುದು. ಮಕ್ಕಳಿಗೆ ಮಾಸ್ಕ್ ಒದಗಿಸುವುದು. ಸ್ಥಳೀಯ ಮಟ್ಟದಲ್ಲಿ ಗ್ರಾ.ಪಂಗಳು ನೋಡಿಕೊಳ್ಳುತ್ತವೆ. ಆನ್ ಲೈನ್, ಆಫ್ ಲೈನ್ ಯಾವುದು ಬೇಕಾದರು ಪಡೆಯಬಹುದು. ಅದು ಪೋಷಕರ ಇಚ್ಚೆಗೆ ಬಿಟ್ಟಿದ್ದೇವೆ. ಒಂದೇ ಒಂದು ಸೋಂಕು ಕಂಡು ಬಂದರೂ ತರಗತಿ ನಿಲ್ಲಿಸುತ್ತೇವೆ ಎಂದು ಸಚಿವ ಬಿ.ಸಿ.ನಾಗೇಶ್ ಹೇಳಿದರು.

 

No comments:

Post a Comment