Thursday 15 July 2021

ಎಸ್ ಎಸ್ ಎಲ್ ಸಿ: ಪೀಸ್ ಪಾವತಿಸದ ವಿದ್ಯಾರ್ಥಿಗಳಿಗೂ ಹಾಲ್ ಟಿಕೆಟ್ ಕೊಡಿ: ಸಚಿವ ಸುರೇಶ್ ಕುಮಾರ್.

 ಬೆಂಗಳೂರು(ಜು.15): ಕೊರೋನಾ ಆತಂಕದ ನಡುವೆಯೇ ಶಿಕ್ಷಣ ಇಲಾಖೆ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಸಲು ಸಜ್ಜಾಗಿದೆ. ಅದರಂತೆ ಜು.19 ಮತ್ತು 22ರಂದು ಪರೀಕ್ಷೆ ನಡೆಯಲಿವೆ. ಶುಲ್ಕ ಪಾವತಿಸದ ಕಾರಣ ಎಸ್​ಎಸ್​ಎಲ್​ಸಿ ಪರೀಕ್ಷೆಗೆ ಹಾಜರಾಗಲು ಯಾವುದೇ ವಿದ್ಯಾರ್ಥಿಗೆ ಪ್ರವೇಶ ಪತ್ರ (ಹಾಲ್​ಟಿಕೆಟ್)​ ನಿರಾಕರಿಸಬಾರದೆಂದು ಶಿಕ್ಷಣ ಇಲಾಖೆ ಖಚಿತಪಡಿಸುತ್ತದೆ ಎಂದು ಪ್ರಾಥಮಿಕ ಮತ್ತ ಪ್ರೌಢ ಶಿಕ್ಷಣ ಇಲಾಖೆ ಸಚಿವ ಎಸ್​.ಸುರೇಶ್​ ಕುಮಾರ್​ ಬುಧವಾರ ಹೇಳಿದ್ದಾರೆ.


ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳು ಯಾವುದೇ ತೊಂದರೆಗಳನ್ನು ಎದುರಿಸದಂತೆ ಬ್ಲಾಕ್​ ಶಿಕ್ಷಣ ಅಧಿಕಾರಿಗಳು(ಬಿಇಒ) ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆ. ಶುಲ್ಕ ಪಾವತಿಗೆ ಸಂಬಂಧಿಸಿದ ಸಮಸ್ಯೆಗಳಿಂದಾಗಿ ಯಾವುದೇ ವಿದ್ಯಾರ್ಥಿಗೆ ಪರೀಕ್ಷೆಗಳಿಗೆ ಹಾಜರಾಗಲು ಅವಕಾಶ ನಿರಾಕರಿಸಲಾಗುವುದಿಲ್ಲ ಎಂದು ಕರ್ನಾಟಕ ಮಾಧ್ಯಮಿಕ ಶಿಕ್ಷಣ ಪರೀಕ್ಷಾ ಮಂಡಳಿಯ (ಕೆಎಸ್​​ಇಇಬಿ) ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದೆ ಎಂದು ಸುರೇಶ್​ ಕುಮಾರ್ ತಿಳಿಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ವಿ. ಅನ್ಬುಕುಮಾರ್ ಅವರು​ ಎಲ್ಲಾ ಹಾಲ್ ಟಿಕೆಟ್​​ಗಳನ್ನು ಜೂನ್​​ 29ರಂದು ಕೆಎಸ್​ಇಇಬಿ ಪೋರ್ಟಲ್​​ಗೆ ಅಪಲೋಡ್​​ ಮಾಡಲಾಗಿದೆ ಎಂದು ಸ್ಪಷ್ಟಪಡಿಸುವ ಸುತ್ತೋಲೆ ಹೊರಡಿಸಿದ್ದಾರೆ. ಸಂಸ್ಥೆಗಳ ಮುಖ್ಯಸ್ಥರು ಪ್ರತಿಯೊಂದು ಶಾಲೆಗೂ ಒದಗಿಸಲಾಗಿರುವ ಲಾಗಿನ್ ಕೋಡ್​ ಬಳಸಿ ಅವುಗಳನ್ನು ಡೌನ್​ಲೋಡ್ ಮಾಡಿಕೊಳ್ಳಬಹುದು.
ವಿದ್ಯಾರ್ಥಿಗಳು ಹಾಲ್ ಟಿಕೆಟ್​ ಪಡೆಯುವ ಬಗ್ಗೆ ಯಾವುದೇ ಸಮಸ್ಯೆ ಇಲ್ಲಿಯವರೆಗೆ ನಮಗೆ ವರದಿಯಾಗಿಲ್ಲ. ಆದರೆ ಕೆಲವರಿಗೆ ತಮ್ಮ ಶಾಲೆಗಳಿಂದ ಹಾಲ್​ ಟಿಕೆಟ್​ ನೀಡಿಲ್ಲ ಎಂಬ ವರದಿ ಕೇಳಿಬಂದ ಹಿನ್ನೆಲೆಯಲ್ಲಿ, ಪರೀಕ್ಷೆಗಳಿಗೆ ನೊಂದಾಯಿಸಿಕೊಂಡ ಎಲ್ಲಾ ವಿದ್ಯಾರ್ಥಿಗಳಿಗೆ ಹಾಲ್​ ಟಿಕೆಟ್​ ನೀಡುವಂತೆ ಬಿಇಒ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಂತಹ ಕುಂದುಕೊರತೆಗಳು ಎದುರಾದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಅಥವಾ ಪೋಷಕರು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯನ್ನು ಸಂಪರ್ಕಿಸಬಹುದು. ಪರೀಕ್ಷೆಗಳಿಗೆ ಹಾಜರಾಗಲು ಬೇಕಾದ ಹಾಲ್​ ಟಿಕೆಟ್​ ಒದಗಿಸಲು ಅಧಿಕಾರಿಗಳು ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ ಎಂದು ಅವರು ಅನ್ಬುಕುಮಾರ್​ ಅವರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಜುಲೈ 19 ಮತ್ತು 22ರಂದು ನಡೆಯಲಿರುವ ಪರೀಕ್ಷೆಗಳಿಗೆ ಎಲ್ಲಾ ಸಿದ್ದತೆಗಳು ಈಗಾಗಲೇ ಪೂರ್ಣಗೊಂಡಿವೆ ಎಂದು ಸಚಿವ ಸುರೇಶ್​ ಕುಮಾರ್​ ಹೇಳಿದ್ದಾರೆ. ಜಿಲ್ಲಾಡಳಿತ, ಶಿಕ್ಷಣಾಧಿಕಾರಿಗಳು ಮತ್ತು ಗ್ರಾಮ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪರೀಕ್ಷೆಗಳನ್ನು ಸುಗಮವಾಗಿ ನಡೆಸಲು ತೆಗೆದುಕೊಂಡ ಕ್ರಮಗಳನ್ನು ಪರಿಶೀಲಿಸುತ್ತಿದ್ದಾರೆ. ಕೋವಿಡ್​-19 ಸಾಂಕ್ರಾಮಿಕ ಪರಿಸ್ಥಿತಿ ಹಿನ್ನೆಲೆಯಲ್ಲಿ ಹೊರಡಿಸಲಾದ ಪ್ರಮಾಣಿತ ಕಾರ್ಯಾಚರಣೆಯ ಕಾರ್ಯವಿಧಾನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅವರಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ಹೇಳಿದರು.
ಮೊದಲಿಗೆ ಜು.19ರಂದು ಕೋರ್​ ವಿಷಯ ಅಂದರೆ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯಗಳಿಗೆ ಪರೀಕ್ಷೆ ನಡೆಯಲಿದೆ. ಬಳಿಕ ಜು.22ರಂದು ಭಾಷಾ ವಿಷಯ ಅಂದರೆ ಕನ್ನಡ, ಇಂಗ್ಲಿಷ್​​, ಹಿಂದಿ ವಿಷಯಗಳಿಗೆ ಪರೀಕ್ಷೆ ಇರುತ್ತದೆ.
ಈ ಬಾರಿ ಎಸ್​ಎಸ್​ಎಲ್​ಸಿ ಪರೀಕ್ಷೆ ಬೇರೆ ರೀತಿಯಾಗಿ ನಡೆಯಲಿದೆ. ಪ್ರಶ್ನೆ ಪತ್ರಿಕೆ ಮಾದರಿ ಬೇರೆ ರೀತಿಯಾಗಿರುತ್ತದೆ. ಅಂದರೆ ಸ್ಪರ್ಧಾತ್ಮಕ ಪರೀಕ್ಷೆ ಮಾದರಿಯಲ್ಲಿ ಇದೇ ಮೊದಲ ಬಾರಿಗೆ 10ನೇ ತರಗತಿ ಪರೀಕ್ಷೆ ನಡೆಸಲಾಗುತ್ತಿದೆ. ಬಹು ಆಯ್ಕೆ ಪ್ರಶ್ನೆಗಳ ಪ್ರಶ್ನೆ ಪತ್ರಿಕೆ ಹಾಗೂ ಒಎಮ್​ಆರ್​​ ಶೀಟ್ ನೀಡಲಾಗುತ್ತದೆ. ವಿದ್ಯಾರ್ಥಿಗಳು ತುಂಬಾ ಜಾಗರೂಕತೆಯಿಂದ ಒಎಮ್​ಆರ್​ ಶೀಟ್​​ನ್ನು ತುಂಬಬೇಕು.
ಒಎಂಆರ್​ ಶೀಟ್​​ ಬಗ್ಗೆ ವಿದ್ಯಾರ್ಥಿಗಳಿಗೆ ಗೊಂದಲ ನಿವಾರಿಸಲು, ಪ್ರತೀ ಪರೀಕ್ಷಾ ಕೇಂದ್ರದಲ್ಲಿ ಒಎಂಆರ್​​ ಹಾಳೆಗಳನ್ನು ಭರ್ತಿ ಮಾಡುವ ಬಗ್ಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ಕೊಠಡಿ ಮೇಲ್ವಿಚಾರಕರಿಗೆ ಸೂಚಿಸಲಾಗಿದೆ.ಪರೀಕ್ಷೆ ನಡೆದ 15 ದಿನಗಳಲ್ಲಿ ಫಲಿತಾಂಶ ಬರುವ ನಿರೀಕ್ಷೆಯಿದೆ ಎಂದು ಸಚಿವರು ಹೇಳಿದರು.

No comments:

Post a Comment