ಚಿತ್ರದುರ್ಗ, ಜೂ. 10: ''ಯಡಿಯೂರಪ್ಪ ಮುಖ್ಯಮಂತ್ರಿ ಆದಾಗಲೆಲ್ಲಾ ರಾಜ್ಯದಲ್ಲಿ ಸಂಕಷ್ಟ ಎದುರಾಗುತ್ತದೆ. ಅವರಿಗೆ ಯಾವ ಗ್ರಹಚಾರ ಇದೆಯೋ ನಮಗೆ ತಿಳಿಯದು'' ಎಂದು ಹೊಸದುರ್ಗ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಹೇಳಿದ್ದಾರೆ.
ಹೊಸದುರ್ಗ ನಗರದ ಸ್ಲಂ ನಿವಾಸಿಗಳು ಹಾಗೂ ಕಡು ಬಡವರಿಗೆ ಉಚಿತವಾಗಿ 6,500 ಆಹಾರ ಕಿಟ್ ವಿತರಿಸಿದ ಬಳಿಕ ಈ ಬಗ್ಗೆ ಮಾತನಾಡಿದ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್, ''ಕೆಲವರು ನಾನು ರಾಜ್ಯದ ಆಡಳಿತದ ನೇತೃತ್ವ ವಹಿಸಿಕೊಂಡರೆ ನಮ್ಮ ಹಣೆ ಬರಹವೇ ಬದಲಾಗುತ್ತದೆ ಎಂಬ ಕನಸು ಕಾಣುತ್ತಾರೆ. ಆದರೆ ನಮ್ಮ ಬಿ.ಎಸ್. ಯಡಿಯೂರಪ್ಪನವರ ಗ್ರಹಚಾರವೋ ಏನೋ ತಿಳಿಯದು. ಅವರು ಅಧಿಕಾರ ವಹಿಸಿಕೊಂಡಾಗಲೆಲ್ಲಾ ಯಾವುದಾದರೂ ಸಂಕಷ್ಟ ಎದುರಾಗುತ್ತದೆ''
ಎಂದು ಬೇಸರ ವ್ಯಕ್ತಪಡಿಸಿದ್ದಾರೆ.''
ಯಡಿಯೂರಪ್ಪ ಕಳೆದ ಬಾರಿ ಮುಖ್ಯಮಂತ್ರಿಯಾದಾಗ ಎಲ್ಲೆಡೆ ನೆರೆ ಹಾವಳಿಯ ಸಂಕಷ್ಟ ಉಂಟಾಗಿತ್ತು. ಆ ಸಂದರ್ಭದಲ್ಲಿ ಅವರು ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಿದ್ದರು. ಈ ಬಾರಿ ಕೋವಿಡ್ ಸಂಕಷ್ಟ ಉಂಟಾಗಿದೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಚರ್ಚೆಯಾಗುತ್ತಿದೆ. ಆದರೆ ಬಿಎಸ್ವೈ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ'' ಎಂದು ಅಭಿಪ್ರಾಯಿಸಿದರು.
''ಒಂದೆಡೆ ಕೊರೊನಾ ಸಂಕಷ್ಟ ಇನ್ನೊಂದೆಡೆ ಈ ವದಂತಿಗಳು ಈ ಎಲ್ಲಾ ಒತ್ತಡದಿಂದ ನಡುವೆಯೇ ಸಿಎಂ ಯಡಿಯೂರಪ್ಪ ಕಾರ್ಯನಿರ್ವಹಿಸಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ. ಈ ರೀತಿ ಒತ್ತಡವಿದ್ದಾಗ ಮುಖ್ಯಮಂತ್ರಿಯಾಗಿ ಸರಿಯಾಗಿ ಪರಿಸ್ಥಿತಿ ನಿಭಾಯಿಸಲು ಕಷ್ಟವಾಗುತ್ತದೆ'' ಎಂದು ಹೇಳಿದರು.
ಇನ್ನು ಈ ಸಂದರ್ಭದಲ್ಲೇ, ''ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರ ಸ್ಥಾನ ಬದಲಾವಣೆ ಬಗ್ಗೆ ಪಕ್ಷ ಯಾವ ನಿರ್ಧಾರ ಕೈಗೊಳ್ಳುತ್ತದೋ ಆ ನಿರ್ಧಾರಕ್ಕೆ ನಾವೆಲ್ಲರೂ ಬದ್ಧ ಎಂದು ಹೇಳಿದ ಶಾಸಕರು, ಸಿಎಂ ಬದಲಾವಣೆ ಬಗ್ಗೆ ನಾನು ಬೇರೆ ಯಾವುದೇ ಹೇಳಿಕೆ ನೀಡುವುದಿಲ್ಲ'' ಎಂದಿದ್ದಾರೆ.
No comments:
Post a Comment